ಮನದ ಮಾತು

Thursday, September 07, 2006

 

ಕನ್ನಡ ಸ್ಮಿತೆಗಳು

ಮುನ್ನುಡಿ:
ಅಂತರ್ಜಾಲದಲ್ಲಿ ಸಂವಹನ(communication) ಕನ್ನಡದಲ್ಲೇ ವ್ಯಾಪಕವಾಗಿ ನಡೆಯುತ್ತಿರುವುದು ಅತ್ಯಂತ ಸಂತಸದ ಸಂಗತಿ. ಕನ್ನಡದಲ್ಲೇ ಚರ್ಚಿಸುವುದು, ಕನ್ನಡದಲ್ಲೆ ಹರಟೆ ಹೊಡೆಯುವುದು, ಕನ್ನಡದಲ್ಲೇ ಬ್ಲಾಗಿಸುವುದು, ಕನ್ನಡದಲ್ಲೇ ಪ್ರತಿಕ್ರಿಯಿಸುವುದು ನಡೆಯುತ್ತಿದೆ ಮತ್ತು ಇವೆಲ್ಲವೂ ದಿನೆ ದಿನೆ ಹೆಚ್ಚುತ್ತಿದೆ.
ಸ್ಮಿತೆಗಳ (Smileys) ವಿಚಾರದಲ್ಲಿ ಕನ್ನಡದ ಬಳಕೆ ಅಷ್ಟು ಇದ್ದಂತಿಲ್ಲ.
ಕನ್ನಡದಲ್ಲಿ ಬರೆಯುವಾಗ, ಸ್ಮಿತೆ ಹಾಕುವ ಉದ್ದೇಶಕ್ಕಾಗಿಯೇ ಇಂಗ್ಲೀಷ್ ಮೊರೆ ಹೋಗಿ, :D, X-(, LOL, ROFLOL, BRB, :O, :P ಇತ್ಯಾದಿಯಾಗಿ ಬಳಸುತ್ತಿದ್ದೇವೆ.

ಇವುಗಳನ್ನೂ ಕೂಡ ಕನ್ನಡದಲ್ಲಿಯೇ ಏಕೆ ಬಳಸಬಾರದು ಎಂದು ಕೆಲವರೊಂದಿಗೆ ಚರ್ಚಿಸಿ, ಕನ್ನಡದಲ್ಲಿಯೆ ಟೈಪ್ ಮಾಡಿ ಭಾವನೆಗಳನ್ನು ವ್ಯಕ್ತಪಡಿಸಬಹುದಾಂತ ಸ್ಮಿತೆಗಳನ್ನು ರೂಪಿಸುವ ಕೆಲಸ ಪ್ರಾರಂಭಿಸಿದೆವು.
ಸುಮಾರು ೨ ತಿಂಗಳ ಸುದೀರ್ಘ ಚರ್ಚೆಯ ಫಲಿತಾಂಶವನ್ನೇ ಇಂದು ನಿಮ್ಮೆಲ್ಲರ ಮುಂದೆ ಹಂಚಿಕೊಳ್ಳುತ್ತಿದ್ದೇವೆ. ಈ ಸ್ಮಿತೆಗಳ ಜೊತೆಗೆ, ಬೆಂಗಳೂರಿನ ಬಿ.ಆರ್.ಕಿರಣ ಅವರು ರೂಪಿಸಿರುವ ಮಿಂಚೆ ಮತ್ತು ಚಿಕ್ಕೋಲೆ ಪದಗಳನ್ನು ಬಳಸಬೇಕೆಂದು ನಿರ್ಧರಿಸಿದ್ದೇವೆ. ಈಗಾಗಲೆ ಈ ಪದಗಳು ಕನ್ನಡದ ಕೆಲವು ಯಾಹೂ ಗುಂಪು, ಗೂಗಲ್ ಗುಂಪುಗಳಲ್ಲಿ ಪ್ರಚಲಿತವಾಗಿವೆ.






:O ==> :ಓ (ಓಹ್)
:D ==> :ಹ (ಹಲ್ಕಿರಿ)
:P ==> :ನಾ (ನಾಲಿಗೆ ತೋರಿಸು)
:-h ==> :ಟಾ (ಟಾಟಾ)
:-? ==> :ಯೋ (ಯೋಚನೆ)
X-( ==> :ಗುರ್ರ್ (ಗುರ್ರ್ ಅಂತ ಕೋಪ ತೋರಿಸು)


LOL ==> ಬಿಬಿನ/ಎಬಿನ (ಬಿದ್ದು ಬಿದ್ದು ನಗು/ಎದ್ದು ಬಿದ್ದು ನಗು)
ROFLOL ==> ನೆಮೇಬಿಬಿನ/ನೆಮೇಎಬಿನ (ನೆಲದ ಮೇಲೆ ಬಿದ್ದು ಬಿದ್ದು ನಗು/ನೆಲದ ಮೇಲೆ ಎದ್ದು ಬಿದ್ದು ನಗು)
OMG ==> ಅದೇ (ಅಯ್ಯೋ ದೇವರೆ)
BRB ==> ಈಬ (ಈಗ ಬರ್ತೀನಿ/ಬರುವೆ)
*thumbsup* ==> *ಜೈ*

:ಸಿ = ಸಿಗೋಣ
:ಮಸಿ = ಮತ್ತೆ ಸಿಗೋಣ
:ಕಕಾಂ = ಕರ್ಮಕಾಂಡ
:ಕಕಾಂಪ = ಕರ್ಮಕಾಂಡದ ಪರಮಾವಧಿ
:ಶಿಶಂ / :ಸಿಸಂ = ಶಿವನೆ ಶಂಭುಲಿಂಗ / ಸಿವನೆ ಸಂಭುಲಿಂಗ
:ಯಚಿ / :ಎಚಿ = ಯಕ್ಕಾಚಿಕ್ಕಿ / ಎಕ್ಕಾಚಿಕ್ಕಿ
:ನನಸು/ಸಾ = ನಕ್ಕು ನಕ್ಕು ಸುಸ್ತು/ಸಾಕಾಯ್ತು
:ಟೋಕೆ = ಟೋಪಿಗಳು ಕೆಳಗೆ
*ಚಿಂಚಿ* = ಚಿಂದಿ ಚಿತ್ರಾನ್ನ

SMS/sms ==> ಚಿಕ್ಕೋಲೆ (ಚಿಕ್ಕ ಓಲೆ)
email ==> ಮಿಂಚೆ (ಮಿಂಚಿನ ಅಂಚೆ)

ಮಿಂಚೆ ಪದದ ಕ್ರಿಯಾಪದ(verb) ರೂಪ - *ಮಿಂಚಿಸು*
Eg: Email that matter to everyone ==> ಆ ಮಾಹಿತಿಯನ್ನು ಎಲ್ಲರಿಗೂ ಮಿಂಚಿಸಿಬಿಡು.


ಮುಗಿಸುವ ಮುನ್ನ:
ಹೇಗನ್ನಿಸಿತು? ಕನ್ನಡ ಸ್ಮಿತೆಗಳ ಬಳಸಲು ನೀವು ಸಿದ್ಧರಿರುವಿರೆ? ತುಂಬಾ ಸಂತೋಷ, ಬನ್ನಿ ಕೈ ಜೋಡಿಸಿ.

ಇಂತಿ,
ಕನ್ನಡ ಸ್ಮಿತೆಗಳ ಬಳಕೆದಾರರ ಬಳಗ
http://www.orkut.com/Community.aspx?cmm=20116420

Link

Saturday, August 19, 2006

 

ವಿನಾಯಕ ಜೋಶಿ - ಕನ್ನಡ ಚಿತ್ರರಂಗದ ನವನಾಯಕ ನಟ

ಮುನ್ನುಡಿ:
ಕನ್ನಡ ಚಿತ್ರರಂಗದಲ್ಲಿ, ಬಾಲನಟನಾಗಿ ತಮ್ಮದೇ ಆದ ಛಾಪು ಮೂಡಿಸಿ ನಂತರ ನಾಯಕರಾದವರ ಪಟ್ಟಿ ದೊಡ್ಡದಾಗಿಯೇ ಇದೆ. ಪುನೀತ್, ವಿಜಯ ರಾಘವೇಂದ್ರ, ಸುನಿಲ್ ಮೊದಲಾದವರಿರುವ ಈ ಪಟ್ಟಿಯಲ್ಲಿ ಇದೀಗ ಸ್ಥಾನಪಡೆಯಲು ಸಜ್ಜಾಗಿದ್ದಾರೆ, ವಿನಾಯಕ ಜೋಶಿ


ಬೆಂಗಳೂರಿನ ಶ್ರೀ ವಾಸುದೇವ ಜೋಶಿ ಮತ್ತು ಶ್ರೀಮತಿ ಶಾಲಿನಿ ಜೋಶಿ ದಂಪತಿಗಳಿಗೆ ೧೯೮೭ ಆಗಸ್ಟ್ ೨೫ರಂದು ಜನಿಸಿದ ವಿನಾಯಕ ಜೋಶಿ ಚಿಕ್ಕ ಬಾಲಕನಾಗಿದ್ದಾಗಲೇ ಅಗಾಧ ಪ್ರತಿಭೆಯ ಕುರುಹು ತೋರಿದರು.
೧೯೯೫ರಲ್ಲಿ - ಅಂದರೆ ೮ ವರ್ಷದ ಬಾಲಕನಾಗಿದ್ದಾಗಲೇ ಬೆಳ್ಳಿಪರದೆಗೆ ಕಾಲಿಟ್ಟ ಇವರು, ಒಂದಾದ ಮೇಲೊಂದು ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದೀಗ ಅವರ ನಾಯಕತ್ವದಲ್ಲಿನ ಮೊದಲ ಚಿತ್ರ, ನನ್ನ ಕನಸಿನ ಹೂವೆ ಬಿಡುಗಡೆಯಾಗುತ್ತಲಿದೆ.




ವಿನಾಯಕ ಜೋಶಿ ಅಭಿನಯದ ಚಿತ್ರಗಳು

೧ ಪುಟ್ಮಲ್ಲಿ
೨ ನಾವಿದ್ದೀವಿ ಎಚ್ಚರಿಕೆ (ಮಕ್ಕಳ ಚಲನಚಿತ್ರೋತ್ಸವಕ್ಕಾಗಿ ನಾಗಭರಣ ನಿರ್ದೇಶನದಲ್ಲಿ ತಯಾರಿಸಿದ ಚಿತ್ರ)
೩ ನಮ್ಮೂರ ಮಂದಾರ ಹೂವೆ
೪ ಸೂತ್ರಧಾರ
೫ ಅಮೃತ ವರ್ಷಿಣಿ
೬ ಸಿಂಹದಮರಿ
೭ ಎಲ್ಲರಂತಲ್ಲ ನನ್ನ ಗಂಡ
೮ ಲಾಲಿ
೯ ವಿಮೋಚನೆ
೧೦ ಮೈ ಡಿಯರ್ ಟೈಗರ್
೧೧ ಆರ್ಯಭಟ
೧೨ ಕುರಿಗಳು ಸಾರ್ ಕುರಿಗಳು (ಬಾಲನಟನಾಗಿ ಕೊನೆಯ ಚಿತ್ರ)
೧೩ ಚಿಟ್ಟೆ
೧೪ ಪಾಂಚಾಲಿ
೧೫ ಕಿಚ್ಚ
೧೬ ಚಿತ್ರ
೧೭ ಅಪ್ಪು
೧೮ ಓಕೆ ಸಾರ್ ಓಕೆ
೧೯ ಕಂಠಿ
೨೦ ಬಾ ಬಾರೋ ರಸಿಕ
೨೧ ಯಶವಂತ್
೨೨ ಆಟೋಗ್ರಾಫ್ ಪ್ಲೀಸ್
೨೩ ಸಖಸಖಿ
೨೪ ೬ ಟೀನ್ಸ್ ಎಂಬ ತಮಿಳು ಚಿತ್ರ
೨೫ ನನ್ನ ಕನಸಿನ ಹೂವೆ

ಇವಗಳಲ್ಲದೇ, ಬಿಡುಗಡೆಯಾಗಬೇಕಿರುವ ಚಿತ್ರಗಳು ಸುಮಾರು ಏಳೆಂಟು.

ವಿನಾಯಕ ಜೋಶಿಯವರು ಪಡೆದ ಪ್ರಶಸ್ತಿ ಪುರಸ್ಕಾರಗಳು ಬಹಳಷ್ಟು.

೧೯೯೬-೯೭ "ಅತ್ಯುತ್ತಮ ಬಾಲನಟ" ರಾಜ್ಯ ಪ್ರಶಸ್ತಿ.

೧೯೯೭-೯೮ ಅಮೃತವರ್ಷಿಣಿ ಚಿತ್ರದಲ್ಲಿನ ನಟನೆಗಾಗಿ, ೧೯೯೭-೯೮ನೇ ಸಾಲಿನ "ಅತ್ಯುತ್ತಮ ಬಾಲನಟ" ಎಂದು ಆರ್ಯಭಟ ಪ್ರಶಸ್ತಿ .
೧೯೯೮-೯೯ ಕಲ್ಯಾಣಮ್ಮ ಮಕ್ಕಳ ಕೂಟ ಪ್ರಶಸ್ತಿ .

ಡ್ರೀಮ್ಸ್ ಇನ್ ಡ್ರೀಮ್ಸ್ ಯುವಕ ಸಂಘ (Dreams in dreams youth association) ನೀಡಿರುವ "ಚಾರ್ಮಿಂಗ್ ಸ್ಟಾರ್" ಎಂಬ ಬಿರುದು ,
ನಾಡಿನಾದ್ಯಂತ ನಡೆದ ವಿವಿಧ ಸಭೆ ಸಮಾರಂಭಗಳಲ್ಲಿ, ಸುಮಾರು ೩೦೦ಕ್ಕೂ ಹೆಚ್ಚಿನ ಸನ್ಮಾನಗಳು, ಇವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.

ಸುಮಾರು ೩೩೦ ಕಲಾವಿದರು ಭಾಗವಹಿಸಿದ್ದ, ಕಳೆದ ವರ್ಷದ(೨೦೦೫) 'ಹೆಚ್.ನರಸಿಂಹಯ್ಯ ನಾಟಕೋತ್ಸವ'ದಲ್ಲಿನ ನಟನೆಗೆ 'ಅತ್ಯುತ್ತಮ ನಟ' ಬಹುಮಾನ ಪಡೆದರು.

ಇವರದೇ ಆದ ಒಂದು ನಾಟಕ ತಂಡವಿದೆ, ಹೆಸರು ದ್ಯುತಿ
೧೯೯೫ರಲ್ಲಿ ಅತ್ಯುತ್ತಮ ನೃತ್ಯಪಟು ಎಂಬ ರಾಜ್ಯಮಟ್ಟದ ಪ್ರಶಸ್ತಿಯು ಪಡೆದಿದ್ದರು.


ಬಾಲನಟನಾಗಿ(ವಿಶೇಷವಾಗಿ ನಮ್ಮೂರ ಮಂದಾರ ಹೂವೆ ಮತ್ತು ಅಮೃತವರ್ಷಿಣಿ ಚಿತ್ರಗಳಲ್ಲಿ) ಜನಮೆಚ್ಚುಗೆ ಗಳಿಸಿದ್ದ ವಿನಾಯಕ ಜೋಶಿ, ಈಗ ತಮ್ಮ ವಿನೂತನ ವರಸೆಯನ್ನು ಪ್ರೇಕ್ಷಕರ ಮುಂದಿಡುತ್ತಿದ್ದಾರೆ.
ತಂದೆ ವಾಸುದೇವ ಜೋಶಿಯವರೇ ನಿರ್ಮಿಸಿರುವ ಈ ಚಿತ್ರವು ಎಲ್ಲ ರೀತಿಯಿಂದಲೂ ಅವರೆಲ್ಲರ ಕನಸಿನ ಹೂವಾಗಿದೆ. ಈ ಹೂವು ಕನಸಿನಲ್ಲದೇ, ನನಸಿನಲ್ಲಿಯೂ ಹೂವಾಗಿ, ಅದರ ಪರಿಮಳವನ್ನು ಪಸರಿಸಲಿ ಎಂದು ಹಾರೈಸೋಣವೇ?




ಸ್ವಾರಸ್ಯ:
ಇಪ್ಪತ್ತೈದಕ್ಕೂ (೨೫) ವಿನಾಯಕ ಜೋಶಿಯವರಿಗೂ ವಿಶೇಷವಾದ ನಂಟು ಇದೆಯೇ? ಗಮನಿಸಿ ನೋಡಿ. ಇವರ ಜನ್ಮ ದಿನಾಂಕ ಆಗಸ್ಟ್ ೨೫, ಇವರ ಚಿತ್ರ ಬಿಡುಗಡೆಯಾಗುತ್ತಿರುವುದೂ ಆಗಸ್ಟ್ ೨೫ ಮತ್ತು ಬಿಡುಗಡೆಯಾಗಿರುವ ಚಿತ್ರಗಳ ಲೆಕ್ಕದಲ್ಲಿ ನನ್ನ ಕನಸಿನ ಹೂವೆ, ಇವರ ಇಪ್ಪತ್ತೈದನೇ ಚಿತ್ರ.

ಚಿತ್ರವು ಯಶಸ್ವಿಯಾಗಲಿ ಎಂದು ಹೃತ್ಪೂರ್ವಕವಾಗಿ ಶುಭಹಾರೈಸುತ್ತೇನೆ!
~ ಮನ
Link

Friday, August 11, 2006

 

ವರಮಹಾಲಕ್ಷ್ಮಿ ಹಬ್ಬದ ಕನ್ನಡ ಚಿತ್ರರಂಗ

ಮುನ್ನುಡಿ:
ಸಾಮಾನ್ಯವಾಗಿ, ಯಾವುದೇ ಮಹತ್ತರವಾದ ಕೆಲಸವನ್ನು ಪ್ರಾರಂಭಿಸುವುದು, ಹೊಸ ಹೆಜ್ಜೆಗಳನ್ನಿಡುವುದು ಸುಸಂದರ್ಭಗಳಲ್ಲಿಯೇ. ಹಬ್ಬಗಳು ನಮ್ಮ ಧರ್ಮಗಳಲ್ಲಿ ಅವುಗಳದೇ ಆದ ಅಚ್ಚೊತ್ತಿಬಿಟ್ಟಿವೆ.
ಕೆಲವರಿಗೆ ಸಂಕ್ರಾಂತಿಯು ಅದೃಷ್ಟದಾಯಕ ಹಬ್ಬವಾದರೇ, ಇನ್ನು ಕೆಲವರಿಗೆ ವಿಘ್ನನಿವಾರಕ ವಿನಾಯಕ ಚತುರ್ಥಿ ಎಂದರೆ ಎಂತಹ ಕೆಲಸವಾದರೂ ಜಯಿಸಬಲ್ಲೆನೆಂಬ ವಿಶ್ವಾಸ. ನನ್ನ ಮಟ್ಟಿಗೆ ವಿಜಯದಶಮಿ ಎಂದರೆ, ಅದೇನೋ ವಿಶೇಷ ಗೌರವ, ಭಯ, ಭಕ್ತಿ, ಆಕರ್ಷಣೆ, ಉತ್ಸಾಹ.
ಕನ್ನಡ ಚಿತ್ರರಂಗದ ಪಾಲಿಗೆ ಇತ್ತೀಚಿನ ವರ್ಷಗಳಲ್ಲಿ ಒಂದು ಹಬ್ಬವು ಅತ್ಯಂತ ವಿಶೇಷವಾಗಿಬಿಟ್ಟಿದೆ. ನೋಡೋಣ ಬನ್ನಿ.

೨೦೦೪ - ವರಮಹಾಲಕ್ಷ್ಮಿ ಹಬ್ಬ - ಬಿಡುಗಡೆಯಾದ ಚಿತ್ರ ಆಪ್ತಮಿತ್ರ.
ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಪ್ರೇಕ್ಷಕನ ನಾಡಿಮಿಡಿತಕ್ಕೆ ಸ್ಪಂದಿಸಿದ ಚಿತ್ರ. ಒಂದು ಸಂಪೂರ್ಣ ವರ್ಷ ಸತತ ಪ್ರದರ್ಶನ ಕಂಡ ದಾಖಲೆಯ ಹೆಗ್ಗಳಿಕೆ ಈ ಚಿತ್ರದ್ದು.
ತನ್ನ ಅದ್ಭುತ ಅಭಿನಯಕ್ಕೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂದೂ ಕಾಯದೆ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದು ಮಾತ್ರ ಸೌಂದರ್ಯ ಮಾಡಿದ ಅನ್ಯಾಯ :(
ರಾರಾ.....ಮತ್ತೊಮ್ಮೆ ಹುಟ್ಟಿ ರಾರಾ! ದುರ್ಗಾಷ್ಟಮಿಯಂದೇ ರಾರಾ, ಪರ್ವಾಲೇದು.

೨೦೦೫ - ವರಮಹಾಲಕ್ಷ್ಮಿ ಹಬ್ಬ - ಜೋಗಿ
ಅರೇ ಜೋಗಿ.....!!
ಜೋಗಿಯ ಜ್ವರಕೆ ಸಿಲುಕದವರಾರು?
ಜೋಗಿಯ ಜಪ ಮಾಡದವರಾರು?
ಹೊಡಿಮಗ ಹೊಡಿಮಗ ಎಂದು ಗುನುಗದವಾರಾರು?

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಎಂದೂ ಕಂಡು ಕೇಳರಿಯದಷ್ಟು ಕುತೂಹಲ, ಆಸಕ್ತಿ, ನಿರೀಕ್ಷೆ ಮೂಡಿಸಿದ ಚಿತ್ರ ಯಾವುದು ಎಂದರೆ, ಸುಲಭವಾದ ಉತ್ತರ: ಜೋಗಿ

ರೌಡಿಸಂ ಮತ್ತು ತಾಯಿಯ ಸೆಂಟಿಮೆಂಟ್ ಎರಡನ್ನೂ ನಾಜೂಕಾಗಿ ಬ್ಲೆಂಡ್ ಮಾಡಿರುವ ಪ್ರೇಂ ನೈಪುಣ್ಯಕ್ಕೆ, ಬೆನ್ನೆಲುಬಾಗಿದ್ದು ಅರುಂಧತಿನಾಗ್ ಮತ್ತು ಶಿವರಾಜಕುಮಾರ್ ಅಮೋಘ ನಟನೆ.


೨೦೦೬- ವರಮಹಾಲಕ್ಷ್ಮಿ ಹಬ್ಬ - ಗಂಡುಗಲಿ ಕುಮಾರರಾಮ
ಒಂದು ವಾರವಾಗಿದೆಯಷ್ಟೆ! ಆದರೆ ಅತ್ಯುತ್ತಮ ಓಪನಿಂಗ್ ದೊರಕಿದೆ. ಬಹಳ ದಿನಗಳಿಂದ ಐತಿಹಾಸಿಕ ಚಿತ್ರಗಳ ಹಸಿವಿನಿಂದ ಬಳಲುತ್ತಿದ್ದ ಪ್ರೇಕ್ಷಕ ಮಹಾಶಯನಿಗೆ ಈ ಚಿತ್ರದ ಮೂಲಕ ರಸದೌತಣ ಉಣಬಡಿಸಿದ್ದಾರೆ ನಿರ್ದೇಶಕ ಭಾರ್ಗವ ಮತ್ತು ತಂಡ. ಚಿತ್ರ ನೋಡಿದ ಪ್ರತಿಯೊಬ್ಬರೂ, ಪತ್ರಿಕೆಗಳು, ಕಿರುತೆರೆ ವಾಹಿನಿಗಳು ಈ ಚಿತ್ರದ ಬಗ್ಗೆ ಪ್ರಮುಖವಾಗಿ ವಿಶ್ಲೇಷಿಸುತ್ತಿರುವುದು ಶಿವರಾಜಕುಮಾರ್ ನಟನೆಯ ಬಗ್ಗೆ. "First day first show" ಜೀ-ಕನ್ನಡ ಕಾರ್ಯಕ್ರಮದಲ್ಲಿ ಸ್ವತಃ ಶಿವರಾಜಕುಮಾರ್ ಅವರೇ ಹೇಳಿದಂತೆ, ಮಗನು ಅಪ್ಪನಂತೆ ಐತಿಹಾಸಿಕ ಪಾತ್ರಕ್ಕೆ ಜೀವತುಂಬಬಲ್ಲನೇ ಎಂಬ ಕುತೂಹಲದಿಂದ ಚಿತ್ರ ನೋಡಲು ಬರುವರೇ ಬಹಳಷ್ಟು ಮಂದಿ. ನಿಜ, ಐತಿಹಾಸಿಕ ಪಾತ್ರಗಳಿಗೆ ಭಾರತದಲ್ಲೇ ಅದ್ವಿತೀಯರೆಂದೆನಿಸಿಕೊಂಡಿರುವ ನಟಸಾರ್ವಭೌಮ ಡಾ.ರಾಜ್‍ಕುಮಾರ್ ಅಭಿನಯಿಸಬೇಕಿದ್ದ ಪಾತ್ರವೊಂದು ಅವರ ಮಗನ ಅಭಿನಯದಲ್ಲಿ ಸಾಕಾರಗೊಂಡಿದೆ ಎಂದರೆ, ಪ್ರೇಕ್ಷಕರು ಖಂಡಿತಾ ಅವರ ಮೆಚ್ಚಿನ "ಅಣ್ಣಾವ್ರನ್ನು" ಚಿತ್ರದಲ್ಲಿ ಹುಡುಕಲು ಪ್ರಯತ್ನಿಸುವುದು ಸಹಜ.
ಮೊದಲ ವಾರದ ಮಟ್ಟಿಗೆ ಪ್ರೇಕ್ಷಕರಿಂದ, ಮಾಧ್ಯಮಗಳಿಂದ, ಚಿತ್ರರಂಗದ ಪ್ರಮುಖರಿಂದ ಅಪಾರ ಮೆಚ್ಚುಗೆ ಗಳಿಸಿರುವ ಈ ಚಿತ್ರವು ಯಶಸ್ಸಿನ ಉತ್ತುಂಗವನ್ನೇರಿ, ವರಮಹಾಲಕ್ಷ್ಮಿ ಹಬ್ಬದ ಚಿತ್ರ ಸರಣಿಯ ದಾಖಲೆಯನ್ನು ಮತ್ತಷ್ಟು ಬಲಪಡಿಸಲಿ.

ಸ್ವಾರಸ್ಯ:
ಈ ಮೂರೂ ಮಹತ್ತರ, "ವರಮಹಾಲಕ್ಷ್ಮಿ" ಕೃಪಾಕಟಾಕ್ಷದ ಚಿತ್ರಗಳಿಗೆ ಸಂಗೀತ ನೀಡಿರುವವರು ಗುರುಕಿರಣ್.
ಮೊದಲೆರಡೂ ಚಿತ್ರಗಳ ಸಂಗೀತ ಮತ್ತು ಹಾಡುಗಳು ಅಪಾರವಾದ ಜನಮೆಚ್ಚುಗೆಗೆ ಪಾತ್ರವಾಗಿದ್ದು, ಕುಮಾರರಾಮನೂ ಅದೇ ಹಾದಿಯತ್ತ ಸಾಗುತ್ತಿರುವ ಕುರುಹು ತೋರಿದ್ದಾನೆ. ಈ ಚಿತ್ರಗಳ ಯಶಸ್ಸಿಗೆ ಗುರುಕಿರಣ್ ಅವರ ಸಂಗೀತದ ಕೊಡುಗೆಯು ಅಪಾರವಾದದ್ದು. ಮುಂದಿನ ವರ್ಷದ ಬ್ಲಾಕ್‍ಬಸ್ಟರ್ ವರಮಹಾಲಕ್ಷ್ಮಿ ಹಬ್ಬದ ಚಿತ್ರಕ್ಕೂ ಗುರುಕಿರಣ್ ಸಂಗೀತವೇ? ಕಾದು ನೋಡಿ :)

ನಿಮಗೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ, ಹಾರ್ದಿಕ ಶುಭಾಶಯಗಳು.
Link

Thursday, August 03, 2006

 

ಇಂಚರ - ಕನ್ನಡ ಅಂತರ್ಜಾಲ ರೇಡಿಯೊ

ಮುನ್ನುಡಿ:
ಉದಯ ಟಿವಿ ನೋಡುವಾಗ ಬೇಜಾರಾದಾಗ, ಈಟೀವಿ ಕನ್ನಡ; ಈಟಿವಿ ಕನ್ನಡ ಬೇಜಾರಾದಾಗ ಉದಯ ಟಿವಿ.
ಹೀಗೆ ಚಾನೆಲ್ ಬದಲಾಯಿಸುವುದು ನಮಗೆಲ್ಲರಿಗೂ ತಿಳಿದೇ ಇದೆ. ಇದೇ ಕಾರಣಕ್ಕೆ, ಟಿವಿ ನೋಡೋದಕ್ಕೆ ಕುಳಿತುಕೊಳ್ಳುವಾಗಲೇ ರಿಮೋಟ್ ಕಂಟ್ರೋಲ್ ಹಿಡಿದು ನಂತರ ಜಾಗ ಹಿಡಿಯುತ್ತೇವೆ. :)
ಇದು ದೂರದರ್ಶನದ ಮಾತಾಯಿತು. ಅಂತರ್ಜಾಲ ನಿವಾಸಿಗಳಿಗೆ?




'ಕನ್ನಡ ಕಸ್ತೂರಿ' ನಾವು ನೀವೆಲ್ಲರೂ ಕೇಳಿ, ಮೆಚ್ಚಿಕೊಂಡಿರುವ ಅಂತರ್ಜಾಲ ಕನ್ನಡ ರೇಡಿಯೊ. ಕನ್ನಡಆಡಿಯೋ.ಕಾಂ ಕೊಡುಗೆಯಾಗಿರುವ ಈ ವಾಹಿನಿಯು, ಅಂತರ್ಜಾಲದಲ್ಲಿನ ಪ್ರಪ್ರಥಮ ಕನ್ನಡ ರೇಡಿಯೊ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

http://www.kannadaaudio.net ಈ ಅಂತರ್ಜಾಲ ಕನ್ನಡವಾಹಿನಿಯ ಅಧಿಕೃತ ತಾಣ.

ಇಂದು ನನ್ನ ಕಿವಿಮುಟ್ಟಿದ ಹೊಸ ವಾಹಿನಿಯೆಂದರೆ, ಇಂಚರ!
ಹೆಸರೇ ಇಷ್ಟು ಇಂಪಾಗಿದೆ, ಇನ್ನು ಹಾಡುಗಳು ಹೇಗಿರಬಹುದೆಂದು ಕಾತುರದಿಂದ ಕೇಳಿದ ನನಗೆ, ಆಶಾಭಂಗವಾಗಲಿಲ್ಲ.
ಹಳೆಯ ಸುಮಧುರ ಗೀತೆಗಳು, ಇತ್ತೀಚಿನ ಗೀತೆಗಳು, ಎಲ್ಲವನ್ನೂ ಹದವಾಗಿ ಮಿಶ್ರಣ ಮಾಡಿದ ಹೆಸರಿಗೆ ತಕ್ಕಂತಹ ಪ್ಲೇಲಿಸ್ಟ್ ಇತ್ತು.
ಈ ರೇಡಿಯೋವನ್ನು ಅಂತರ್ಜಾಲದಲ್ಲಿನ ಕೇಳುಗರಿಗೆ ಕಾಣಿಕೆಯಿತ್ತಿರುವರು ಕನ್ನಡಟೊರೆಂಟ್ಸ್ ಸಮುದಾಯ.

ಕಿವಿಗಿಂಪಾದ ಇಂಚರವನ್ನು ಆಲಿಸಬಹುದಾದ ಲಿಂಕ್:
http://www.kannadatorrents.com:8000/listen.pls


ಇಂಚರವನ್ನು ನಮ್ಮೆಲ್ಲರಿಗರ್ಪಿಸಿರುವ ಕನ್ನಡಟೊರೆಂಟ್ಸ್ ನಿರ್ವಾಹಕ ಮಂಡಳಿಗೆ ಧನ್ಯವಾದಗಳು, ಹಾಗೂ ಈ ವಾಹಿನಿಯನ್ನು ಯಶಸ್ವಿಯಾಗಿ ಪ್ರಾರಂಭಿಸಿದಕ್ಕೆ ಹಾರ್ದಿಕ ಅಭಿನಂದನೆಗಳು.

ಅದೂ ೨೪/೭ ಮತ್ತಿದೂ ೨೪/೭. ಆದರೆ ಎರಡೂ ಸೇರಿ, ೪೮/೭ ಮಾಡಲು ಸಾಧ್ಯವಿಲ್ಲ. ದಿನಕ್ಕೆ ೨೪ ಗಂಟೆಗಳು ಮಾತ್ರ. :)

ಕಿವಿಗಳೆರಡಿದ್ದರೂ ಸಂಗೀತವನ್ನಾಸ್ವಾಧಿಸಬಹುದಾದ ಮನಸ್ಸು (ಮನ!?) ಒಂದೇ!


ಮುಗಿಸುವ ಮುನ್ನ:

ಕನ್ನಡ ಕಸ್ತೂರಿಯ ಕಂಪು
ಇಂಚರದ ಇಂಪು
ಕನ್ನಡಿಗರ ಹೃದಯಕೆರೆಯಲಿ ತಂಪು!



~ ಮನ
Link

Friday, July 21, 2006

 

ಆಪರೇಷನ್ ಡೈಮಂಡ್ ರ್ಯಾಕೆಟ್ - ರಾಕೆಟ್ ಅಲ್ಲ

ಮುನ್ನುಡಿ:
ತಪ್ಪು ಮಾಡದವ್ರ್ ಯಾರವ್ರೇ? ತಪ್ಪೇ ಮಾಡದವ್ರ್ ಎಲ್ಲವ್ರೆ?
ಬಹಳ ವರ್ಷಗಳಿಂದ ಸತ್ಯವೆಂದು ನಂಬಿದ್ದ ವಿಷಯವೊಂದು ಇದ್ದಕ್ಕಿದ್ದ ಹಾಗೆ ಮಿಥ್ಯವಾಗುವ ಉದಾಹರಣೆಯೊಂದನ್ನು 'ಹಂಸಗೀತೆಯ ಸಂಗೀತದ ಹಿಂದೆ' ಲೇಖನದಲ್ಲಿ ಬರೆದದ್ದು ಸರಿಯಷ್ಟೆ. ಆ ವರ್ಗಕ್ಕೆ ಸೇರುವ ಮತ್ತೊಂದು ಅಂಶ ಇದೋ ಇಲ್ಲಿದೆ.






ಚಿತ್ರಗಳನ್ನು ಗಮನಿಸಿ. ಇದು ಖಂಡಿತಾ ರ್ಯಾಕೆಟ್ / Racket.
ಕೆಲವು ತಾಣಗಳಲ್ಲಿ ಹಾಕಿರುವಂತೆ ರಾಕೆಟ್ / Rocket ಅಲ್ಲ. ಈ ಚಿತ್ರಗಳನ್ನು ವಿಸಿಡಿ ಇಂದ ಪಡೆದದ್ದು. ಅಧಿಕೃತವಾಗಿ ಚಿತ್ರದ ಹೆಸರು ಏನು ಎಂಬುದಕ್ಕೆ ಇದನ್ನು ಉಪಯೋಗಿಸಬಹುದು.
ಈ ಪದವು ತಪ್ಪಾಗಿ ಹಲವಾರು ಕಡೆ ಪ್ರಯೋಗವಾಗಿದೆ, ಮಾತಾಡವಾಗಲೂ ಹಲವಾರು ಜನ(ಇಲ್ಲಿಯವರೆಗೂ ನಾನು ಕೂಡ :ನಾ) ತಪ್ಪಾಗಿ ಉಪಯೋಗಿಸುತ್ತಿದ್ದಾರೆ.

ಉದಾಹರಣೆಗೆ:
ಚಿತ್ರರಂಗ ಡಾಟ್ ಕಾಂ: http://www.chitraranga.com/moviebase/movieinfo.asp?movieid=588
Spicevienna ಪುಟ: http://www.spicevienna.org/showMovie.php?m=23408
Randomness blog: http://thehappypeople.blogspot.com/2005/12/operation-diamond-rocket.html
Kulki's Kannada Lyrics Page: http://www.cs.toronto.edu/~kulki/kannada/haadu.html

ಮತ್ತು ಮುಖ್ಯವಾಗಿ, ಈ ರೀಡಿಫ್ ಲೇಖನ: http://in.rediff.com/movies/2006/apr/17raj.htm

ಆಂಗ್ಲ ವಿಕಿಪೀಡಿಯದ ಡಾ.ರಾಜ್ ಪುಟದಲ್ಲಿಯೂ ಈ ತಪ್ಪು ['ಅಚಾತುರ್ಯ'ವೆನ್ನಲಾಗದು :)] ನುಸುಳಿತ್ತು.

ಅದೇ ರೀತಿ, ಕನ್ನಡ ವಿಕಿಪೀಡಿಯದಲ್ಲಿ ಇರುವ ಡಾ.ರಾಜ್ ಲೇಖನದಲ್ಲಿ, ಚಿ.ಉದಯಶಂಕರ್ ಲೇಖನಲ್ಲಿ, ಅಷ್ಟೇ ಅಲ್ಲದೇ ಸ್ವತಃ ಆಪರೇಷನ್ ಡೈಮಂಡ್ ರಾಕೆಟ್ ಅನ್ನುವ ಲೇಖನದಲ್ಲೇ ತಪ್ಪುಗಳಾಗಿಬಿಟ್ಟಿದ್ದವು. ಅವೆಲ್ಲವನ್ನೂ ಈಗಷ್ಟೆ ಸರಿಪಡಿಸಿದೆ.

ಇನ್ನೂ ಹಲವಾರು ಅಂತರ್ಜಾಲ ತಾಣಗಳು, ಬ್ಲಾಗ್ ಪುಟಗಳು, ಪುಸ್ತಕಗಳು ಇತ್ಯಾದಿಯಾಗಿ ಜನಮನದಲ್ಲಿ ಇದೊಂದು ತಪ್ಪು ಪದ ನುಸುಳಿಬಿಟ್ಟಿದೆ. ಹಾಗೆಂದು ಎಲ್ಲರೂ ತಪ್ಪಾಗೇ ಬಳಸುತ್ತಿದ್ದಾರೆ ಎಂದರ್ಥವಲ್ಲ. ಸರಿಯಾದ ಪದಪ್ರಯೋಗ ಮಾಡುತ್ತಿರುವವರೂ ಬಹಳಷ್ಟು ಜನರಿದ್ದಾರೆ. ಸರಿಯಾದ ಪ್ರಯೋಗದ ಬಗ್ಗೆ ಒಬ್ಬರಿಂದ ಒಬ್ಬರಿಗೆ ತಿಳಿಯಬೇಕಷ್ಟೆ. ಸ್ವತಃ ನಾನೇ ಚಿಕ್ಕಂದಿನಿಂದ ಇಲ್ಲಿಯವರೆಗೂ ಇದನ್ನು 'ರಾಕೆಟ್' ಎಂದೇ ಅಂದುಕೊಂಡಿದ್ದೆ. ಇದೀಗ ನಿಖರವಾದ ಮಾಹಿತಿಯೊಂದಗೆ, ಸತ್ಯವಾವುದು, ಮಿಥ್ಯವಾವುದು ಎಂದು ತಿಳಿಯಿತು. ಇದು ನಿಮಗೂ ಅನ್ವಯಿಸಿದರೆ, ಈ ಲೇಖನ ಸಾರ್ಥಕ, ಹಾಗೆಯೇ ನಿಮಗೆ ತಿಳಿದವರಿಗೂ ಸರಿಪಡಿಸಿಕೊಳ್ಳಲು ಹೇಳಿ.



ಮುಗಿಸುವ ಮುನ್ನ:
ಈ ಚಿತ್ರದ ಸರಿಯಾದ ಹೆಸರನ್ನು ಮೊದಲ ಬಾರಿಗೆ, ಕನ್ನಡ ಆಡಿಯೋ ಫೋರಮ್ಮಿನಲ್ಲಿ ನನಗೆ ತಿಳಿಸ್ಕೊಟ್ಟ ಭೂತಕ್ಕೆ ನನ್ನ ಧನ್ಯವಾದಗಳು. :)

- ಮನ
Link

Wednesday, July 19, 2006

 

ಜಿನಾಡೇನ್ ಜಿಡಾನ್ ಸಾಹಸ - ವಿವಿಧ ದೃಷ್ಟಿಕೋನಗಳು

ಮುನ್ನುಡಿ:
ಸುಮಾರು ಒಂದು ತಿಂಗಳಕಾಲ ಪ್ರಪಂಚದಾದ್ಯಂತ ಕಾತುರದಿಂದ ನೋಡಿದ, ಅನುಭವಿಸಿದ ಫುಟ್ ಬಾಲ್ ಆಟ ಅಂತಿಮ ಪಂದ್ಯದಲ್ಲಿನ ಕೆಲವು ರೋಚಕ ಕ್ಷಣಗಳೊಂದಿಗೆ 'ಮನ'ಸೆಳೆಯಿತು.
ಅತ್ಯಂತ ರೋಚಕ ದೃಶ್ಯವೊಂದನ್ನು ಅವರವರ ಮೂಗಿನ ನೇರಕ್ಕೆ ಹೇಗೆ ನೋಡುತ್ತಾರೆ ಎಂಬುದಕ್ಕೆ ಅದ್ಭುತವಾತ ಸೃಜನಶೀಲತೆಯಿಂದ ಯಾರೋ ತಯಾರಿಸಿರುವ ಈ ದೃಶ್ಯಾವಳಿಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಈ ದೃಶ್ಯಗಳನ್ನು ತಯಾರಿಸಿದ ವ್ಯಕ್ತಿಗೆ *ಟೋಪಿಗಳು ಕೆಳಗೆ*



ಜಿನಾಡೇನ್ ಜಿಡಾನ್ ಗುಮ್ಮಿದ ದೃಶ್ಯದ ಗಮ್ಮತ್ತು ಈ ಲೇಖನದ ಜೀವಾಳ.
ಇದರ ಬಗ್ಗೆ ಆಗಲೇ ಹಲವಾರು ಕಾರ್ಟೂನ್, ಜೋಕ್, ಬ್ಲಾಗುಗಳು ಬಂದಿವೆ.
ಉದಾ: ಹೆಚ್.ಪಿ.ಎನ್ ಅವರ ಈ ಬ್ಲಾಗು ಬಹಳ ಮಜವಾಗಿದೆ. :)

ಈಗ ದೃಶ್ಯಾವಳಿ ನೋಡೋಣ ಬನ್ನಿ.


ಜರ್ಮನ್ನರ ದೃಷ್ಟಿಕೋನದಲ್ಲಿ....




ಫ್ರೆಂಚರ ದೃಷ್ಟಿಕೋನದಲ್ಲಿ.....




ಇಟಲಿಯನ್ನರ ದೃಷ್ಟಿಕೋನದಲ್ಲಿ.....





ಕಾಶ್ಮೀರದ ಜನತೆಯ ದೃಷ್ಟಿಕೋನದಲ್ಲಿ.....




ಥ್ರಿಲ್ಲರ್ ಮಂಜು ದೃಷ್ಟಿಕೋನದಲ್ಲಿ.....





ಮುಗಿಸುವ ಮುನ್ನ:

ಇದರಲ್ಲಿ ಪೂರ್ವಾಗ್ರಹಗಳೊಂದಿಗೆ ಮೂಗಿನ ನೇರಕ್ಕೆ ನೋಡಿದ ದೃಷ್ಟಿಕೋನಗಳು(POV) ಯಾವು ಯಾವು? ವಸ್ತುನಿಷ್ಠ ದಷ್ಟಿಕೋನ (ನ್ಯೂಟ್ರಲ್ ಪಿಓವಿ) ಯಾವುದು? ನೀವೆ ನಿರ್ಧರಿಸಿ. ಜಿನಾಡೇನ್ ಜಿಡಾನ್ ಗೊಂದು ಹಸನ್ಮುಖದ ವಿದಾಯ. :)

~ ಮನ

Link

Sunday, July 16, 2006

 

Firefox ಬ್ರೌಸರಿನಲ್ಲಿ ಕನ್ನಡ ಬ್ಲಾಗಿನ ಸಮಸ್ಯೆ - ಪರಿಹಾರ

ಮುನ್ನುಡಿ:
Blogspot.com ಡೊಮೈನಿನಲ್ಲಿರುವ ಬಹುತೇಕ ಕನ್ನಡ ಬ್ಲಾಗ್‍ಗಳ ಶೀರ್ಷಿಕೆಗಳು ಮತ್ತು ಅಲ್ಲಿನ ಲೇಖನಗಳ ಶೀರ್ಷಿಕೆಗಳು ಫೈರ್‍ಫಾಕ್ಸ್ ಬ್ರೌಸರಿನಲ್ಲಿ ವಿಕೃತವಾಗಿ ಕಾಣುವುದನ್ನು ಸಿಸ್ಯ ಅವರು ಮನ'ದ ಗಮನಕ್ಕೆ ತಂದರು. ಈ ಸಮಸ್ಯೆಯ ಬಗ್ಗೆ ಒಂದು ನೋಟ ಮತ್ತು ಪರಿಹಾರದ ಪ್ರಯತ್ನ ಈ ಲೇಖನದ ಉದ್ದೇಶ.


ಈ ಚಿತ್ರವನ್ನು ಗಮನಿಸಿ.

ನನ್ನ ಬ್ಲಾಗಿನ ಮುಖ್ಯಪುಟ ಫೈರ್‍ಫಾಕ್ಸ್ ಬ್ರೌಸರಿನಲ್ಲಿ ಹೀಗೆ ಕಾಣುತ್ತಿತ್ತು. ಇದನ್ನು ದಿನವೂ ನೋಡುತ್ತಿದ್ದೆನಾದರೂ, InternetExplorer ನಲ್ಲಿ ಸರಿಯಾಗಿ ಕಾಣುತ್ತಿದ್ದುದರಿಂದ, ಇದು "ನನ್ ಕಂಪ್ಯೂಟರ್‍ನ firefoxನಲ್ಲೇ ಏನೋ ಪ್ರಾಬ್ಲಂ ಇರ್ಬೇಕು" ಎಂದು ಉದಾಸೀನ ಮಾಡಿ ಸುಮ್ಮನಾಗಿದ್ದೆ. ಆದರೆ ಇದು ನನ್ನೊಬ್ಬನ ಬ್ಲಾಗಿನ ಸಮಸ್ಯೆಯಲ್ಲ, ಕನ್ನಡದ ಬಹುತೇಕ ಬ್ಲಾಗುಗಳಿಗೆ ಕಾಡುತ್ತಿರುವ ಫೈರ್‍ಫಾಕ್ಸ್ ಪಿಡುಗು ಎಂದು ನನಗೆ ಮನದಟ್ಟು ಮಾಡಿಕೊಟ್ಟವರು ಫೈರ್‍ಫಾಕ್ಸ್ ಕಟ್ಟಾಭಿಮಾನಿಯಾದ ಸಿಸ್ಯ.

ಈಗ ಈ ಕೆಲವು ಕನ್ನಡ ಬ್ಲಾಗುಗಳನ್ನು ಗಮನಿಸಿ.
ಸುಸಂಕೃತರ ಅವಲೋಕನ: susheelsandeepmurali.blogspot.com

ಭೂತದ ಕಾವ್ಯ ಸುಧೆ: kaavyasudhe.blogspot.com

ಮಂಜೇಗೌಡರ ಸಕಲ ಶರಣಾರ್ಥಿಗಳು: sakala.blogspot.com


ಶ್ರೀಮಾತಾ ಅವರ ಹೀಗೆ ಸುಮ್ನೆ: heegesummne.blogspot.com


ಶಿವಶಂಕರ್ ಅವರ 'ಪಾತರಗಿತ್ತಿ ಪಕ್ಕ': chittey.blogspot.com

ಪಚ್ಚಿ + ಸುಸ್ ಕಾಂಬೋ ಕನ್ನಡಕಸ್ತೂರಿ: kannadakastoori.blogspot.com


ಓಲೆಗರಿ: olegari.blogspot.com


ಮನಸ್ವಿನಿ-ಮನ: manaswini-mana.blogspot.com



ಸಾಕಲ್ಲವೇ ಸಧ್ಯಕ್ಕೆ, ಇಷ್ಟು ಬ್ಲಾಗುಗಳು? ಮೇಲೆ ಹಾಕಿರುವ ಚಿತ್ರಗಳ ಮೂಲಕ, ಈ ಬ್ಲಾಗುಗಳಲ್ಲಿನ ಹೆಸರಿನ display ಸಮಸ್ಯೆಯ ಅರಿವು ನಿಮಗಾಯಿತಲ್ಲವೇ?

ಸಮಸ್ಯೆಗೆ ಕಾರಣ:
ಈ ಸಮಸ್ಯೆಗೆ ಮೂಲಕಾರಣ ಅಕ್ಷರಗಳ ಸ್ಪೇಸಿಂಗ್ ("letter-spacing").
ಸ್ಪೇಸಿಂಗ್ ಅಂದರೆ, ಒಂದು ಅಕ್ಷರಕ್ಕೂ ಮುಂದಿನ ಅಕ್ಷರಕ್ಕೂ ನಡುವೆ ಎಷ್ಟು ಜಾಗಬಿಡಬೇಕು ಎನ್ನುವ ನಿಯಮ ಅಥವಾ ಸೌಲಭ್ಯವೆಂದುಕೊಳ್ಳಿ.
MS Word ತಂತ್ರಾಂಶದಲ್ಲಿ ಟೈಪ್ ಮಾಡಿ ಅನುಭವವಿರುವವರಿಗೆ ಇದು ಹೊಸತೇನಲ್ಲ. left alignment, right alignment, letter spacing ಇತ್ಯಾದಿಯಾಗಿ ವಿಧವಿಧವಾದ ಸೌಲಭ್ಯಗಳು ಸಾಮಾನ್ಯವಾಗಿ ಎಲ್ಲಾ ವರ್ಡ್ ಪ್ರೋಸೆಸಿಂಗ್ ತಂತ್ರಾಂಶಗಳಲ್ಲಿರುತ್ತವೆ.
ಆದರೆ firefoxನಲ್ಲಿ ಮಾತ್ರ, ಕನ್ನಡದ ಅಕ್ಷರಗಳ ಸ್ಪೇಸಿಂಗ್ ನಲ್ಲಿ ಲೋಪವಿದೆ. ಲೋಪವೇನೆಂದರೆ, ಅಕ್ಷರದಲ್ಲಿನ ಒತ್ತು, ದೀರ್ಘ, ತಲೆಕಟ್ಟು, ಕೊಂಬು, ಅರ್ಕಾವತ್ತು ಇವೆಲ್ಲವನ್ನೂ ಪ್ರತ್ಯೇಕ ಅಕ್ಷರಗಳೆಂದು firefox ಭಾವಿಸುತ್ತದೆ. ಹಾಗಾಗಿ, ಒಂದೊಂದನ್ನೂ ಬಿಡಿಬಿಡಿಯಾಗಿ diplay ಮಾಡಲು ಪ್ರಯತ್ನಿಸುತ್ತದೆ. ಕಾಗುಣಿತವಿಲ್ಲದ, ಬಿಡಿ ಅಕ್ಷರಗಳನ್ನು ಮಾತ್ರ ಉಪಯೋಗಿಸಿ ನೋಡಿ. ಆಗ ಈ ಸಮಸ್ಯೆ ಇರುವುದಿಲ್ಲ. ಉದಾಹರಣೆಗೆ, ಮನ, ಜನ, ಸದನ, ಮದನ, ರಚನ, ಪದ, ಅಗಲ, ಅಚಲ ಇತ್ಯಾದಿ ಪದಗಳು.
ಗುಣಿತಾಕ್ಷರಗಳಲ್ಲಿ ಆದರೆ, ಒಂದು ಅಕ್ಷರವು ಒಂದಕ್ಕಿಂತ ಹೆಚ್ಚಿನ glyphನಿಂದ ತಯಾರಾಗುತ್ತದೆ. glyph ಅಂದರೆ ಮೇಲೆ ಹೇಳಿದ ಕೊಂಬು, ದೀರ್ಘ ಇತ್ಯಾದಿ. Firefox ಲೆಟರ್-ಸ್ಪೇಸಿಂಗನಲ್ಲಿನ ದೋಷವೆಂದರೆ, ಒಂದೊಂದು glyph ಅನ್ನೂ ಒಂದೊಂದು ಅಕ್ಷರವೆಂದು ಅದು ಅಪಾರ್ಥ ಮಾಡಿಕೊಳ್ಳುವುದು.
ಬರಹ ಕನ್ನಡ ಫಾಂಟಿನಲ್ಲಿನ ಎಲ್ಲಾ glyph ಗಳ ಪಟ್ಟಿಗಾಗಿ ಇಲ್ಲಿ ನೋಡಬಹುದು: http://www.baraha.com/web_docs/glyph_codes_kan.htm


ಈಗ ಪರಿಹಾರದ ಕಡೆಗೆ ಗಮನ ಹರಿಸೋಣ.
ಲೆಟರ್ ಸ್ಪೇಸಿಂಗ್ ಬಗ್ಗೆ ನಿಮ್ಮ ಬ್ಲಾಗ್ ಟೆಂಪ್ಲೇಟಿನಲ್ಲಿರುವ ಸಾಲನ್ನು ತೆಗೆದು ಹಾಕಿ ಅಥವ ಕಾಮೆಂಟ್ ಮಾಡುವ ಮೂಲಕ ಅನೂರ್ಜಿತಗೊಳಿಸಿ.
ಬ್ಲಾಗಿನ ಹೆಸರಲ್ಲಿ display ಸಮಸ್ಯೆ ಇದ್ದರೆ,
h1 header style definition ನಲ್ಲಿ ಈ ಸಾಲು ಇರುತ್ತದೆ. ಅಷ್ಟನ್ನು ಮಾತ್ರ ತೆಗೆದು ಹಾಕಿ.
letter-spacing:-2px;

ಲೇಖನದ ಹೆಸರಲ್ಲಿ display ಸಮಸ್ಯೆ ಇದ್ದರೆ, ಇದು h2 style defintion ನಲ್ಲಿ ಇರುವ ಸಾಧ್ಯತೆಗಳಿರುತ್ತವೆ. ನಿಮ್ಮ ಟೆಂಪ್ಲೇಟ್ ಕೋಡ್ ನೋಡಿ, ಎಲ್ಲಿದೆ ಎಂದು ತಿಳಿಯಿರಿ.

ಉದಾಹರಣೆಗೆ: ನನ್ನ ಟೆಂಪ್ಲೇಟಿನಲ್ಲಿ ಮೊದಲು ಈ ಸಾಲು ಇತ್ತು.
h1{padding:25px 0px 10px 3%;border-top:double 3px #BF5C00;border-bottom:solid 1px #E89E47;color:#F5DEB3;letter-spacing:-2px;background:#FEA088;font:bold 300% Verdana,Sans-Serif;}

ಅದನ್ನು ಈಗ ಕೆಳಕಂಡ ರೀತಿಯಲ್ಲಿ ಬದಲಾಯಿಸಿದೆ ಅಷ್ಟೆ, letter-spacing ಕೋಡ್ ತೆಗೆಯುವ ಮೂಲಕ. ಸಮಸ್ಯೆ ಬಗೆಹರಿಯಿತು.
h1{padding:25px 0px 10px 3%;border-top:double 3px #BF5C00;border-bottom:solid 1px #E89E47;color:#F5DEB3;background:#FEA088;font:bold 300% Verdana,Sans-Serif;}

ಮುಗಿಸುವ ಮುನ್ನ:

ಈ ಸಮಸ್ಯೆಯು ನಿಮ್ಮ ಬ್ಲಾಗಿನಲ್ಲಿಯೇ ಇದ್ದಲ್ಲಿ, ಮೇಲೆ ತಿಳಿಸಿದ ಪರಿಹಾರವನ್ನು ಉಪಯೋಗಿಸಿ, ಸಮಸ್ಯೆ ಬಗೆಹರಿಸಿಕೊಳ್ಳಿ. ನಿಮಗೆ ತಿಳಿದವರ ಬ್ಲಾಗುಗಳಲ್ಲಿ ಈ ಸಮಸ್ಯೆ ಕಂಡು ಬಂದಲ್ಲಿ ಅವರಿಗೂ ತಿಳಿಸಿ, ಸರಿಪಡಿಸಲು ನೆರವಾಗಿ.
ಈ ಸಮಸ್ಯೆಯ ಅರಿವನ್ನು ಮಾಡಿಕೊಟ್ಟು, ಇದರ ಬಗ್ಗೆ ಬ್ಲಾಗಿಸಬೇಕೆಂದು ಪ್ರೇರೇಪಿಸಿದ ಸಿಸ್ಯ ಅವರಿಗೆ ಧನ್ಯವಾದಗಳು! :)

~ ಮನ

Link

Thursday, July 13, 2006

 

ಅಂತರ್ಜಾಲದಲ್ಲಿ ಕನ್ನಡ ದಿನಪತ್ರಿಕೆಗಳು


ಮುನ್ನುಡಿ:
'ಅಂತರ್ಜಾಲದಲ್ಲಿ ಕನ್ನಡ' ಕಳೆದ ಕೆಲವು ತಿಂಗಳುಗಳಿಂದ ಅತ್ಯಂತ ಕ್ಷಿಪ್ರವಾಗಿ ಬೆಳವಣಿಗೆ ಕಾಣುತ್ತಿರುವುದು ಸಂತಸದ ಸಂಗತಿ. ಕನ್ನಡದ ಅಂತರ್ಜಾಲದ ತಾಣಗಳು, ಚರ್ಚಾವೇದಿಕೆಗಳು, ಕನ್ನಡದಲ್ಲಿಯೇ ಈಮೈಲ್, ಯಾಹೂ/ಗೂಗಲ್ ಮೆಸೆಂಜರ್‍ಗಳಲ್ಲಿ ಕನ್ನಡದಲ್ಲಿಯೇ ಮಾತುಕತೆ, ಮತ್ತು ಇವೆಲ್ಲದಕ್ಕೂ ಮಿಗಿಲಾಗಿ ದಿನೇ ದಿನೇ ಹೆಚ್ಚುತ್ತಿರುವ ಕನ್ನಡ ಬ್ಲಾಗ್‍ಗಳು, ಇತ್ಯಾದಿ ನಿಜಕ್ಕೂ ಒಂದು ಆಶಾದಾಯಕ ಬೆಳವಣಿಗೆ ಕನ್ನಡ/ಕರ್ನಾಟಕ/ಕನ್ನಡಿಗರ ಪಾಲಿಗೆ. ಈ ಸಾಲಿಗೆ ಸೇರಿದ, ಸೇರುತಿರುವ ಇನ್ನೊಂದು ವರ್ಗವೆಂದರೆ, ಮುದ್ರಿತ ಅವತರಿಣಿಕೆಯನ್ನೇ("printed version") ಅಂತರ್ಜಾಲದಲ್ಲೂ ಲಭ್ಯಗೊಳಿಸುತ್ತಿರುವ ದಿನಪತ್ರಿಕೆಗಳು. ಕನ್ನಡದ ಎಲ್ಲಾ ಪ್ರಮುಖ ದಿನಪತ್ರಿಕೆಗಳ ಕಡೆಗೊಮ್ಮೆ ನೋಟವ ಬೀರೋಣ ಬನ್ನಿ.


ಬೆಳ್ಳಂಬೆಳಗ್ಗೆ ಎದ್ದು, ಬಿಸಿಬಿಸಿ ಕಾಫಿ ಕುಡಿಯುತ್ತಾ ದಿನಪತ್ರಿಕೆ ಓದುವುದರಲ್ಲಿನ ಅನುಭವದ ರೋಚಕತೆ, ತನ್ಮಯತೆ, ಬೇರಾವುದೇ ರೀತಿಯಲ್ಲಿ ಓದಿದಾಗ ಇರುವುದಿಲ್ಲ. ಮುದ್ರಣ ಮಾಧ್ಯಮದ ಗಮ್ಮತ್ತಿರುವುದೇ ಅಲ್ಲಿ.
ಅದಿರಲಿ. ಅಂತರ್ಜಾಲವಾಸಿಗಳಿಗೆ, ಮುದ್ರಿತ ದಿನಪತ್ರಿಕೆಗಳ ಸುಳಿವೂ ಇಲ್ಲದಂತಾಗಿತ್ತು. ಅಂತರ್ಜಾಲ ಆವೃತ್ತಿಯಲ್ಲಿ ಲೇಖನಗಳು ಸಿಗುತ್ತಿದ್ದವೆಯೇ ಹೊರತು, ಪತ್ರಿಕೆಯ ಪುಟ ತಿರುವಿಹಾಕಿದ ಅನುಭವವಾಗುತ್ತಿರಲಿಲ್ಲ, ಒಂದು ಪುಟವೂ ಬಿಡದೆ ಓದುವವರಿಗಂತೂ ಏನೇನೂ ಸಿಗುತ್ತಿಲ್ಲವೇನೋ ಎಂಬ ಅನುಭವ. ಆದರೆ, ಈಗ ಹಾಗಿಲ್ಲ.
ಕನ್ನಡದ ಪ್ರಮುಖ ದಿನಪತ್ರಿಕೆಗಳು ಈಗ ಮುದ್ರಿತ ಅವತರಿಣಿಕೆಯನ್ನೇ ಅಂತರ್ಜಾಲದಲ್ಲಿಯೂ ಲಭ್ಯವಾಗಿಸುತ್ತಿವೆ. ಮನೆಯಲ್ಲಿರುವವರು ದಿನಪತ್ರಿಕೆ ಕೈಲಿ ಹಿಡಿದು ಏನೇನು ಓದುತ್ತಾರೋ, ಅವೆಲ್ಲವನ್ನೂ ಈಗ ನಾವು ನೀವೆಲ್ಲರೂ ಓದಬಹುದು.

ಕನ್ನಡ ಪ್ರಭ
ಅಂತರ್ಜಾಲ ಆವೃತ್ತಿ: http://www.kannadaprabha.com
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.kannadaprabha.com/pdf




ಪ್ರಜಾವಾಣಿ
ಅಂತರ್ಜಾಲ ಆವೃತ್ತಿ: http://www.prajavani.net
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.prajavaniepaper.com




ವಿಜಯ ಕರ್ನಾಟಕ
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.vijaykarnatakaepaper.com




ಸಂಯುಕ್ತ ಕರ್ನಾಟಕ
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.samyukthakarnataka.com




ಉದಯವಾಣಿ
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.pressdisplay.com
ಇದರಲ್ಲಿ, "Lauguages" ಮೆನುವಿನಲ್ಲಿ, ಕನ್ನಡ ಆಯ್ಕೆಮಾಡಿಕೊಳ್ಳಿ. ಆಗ 'ಉದಯವಾಣಿ' ಕಾಣಿಸುತ್ತದೆ.




ಸಂಜೆವಾಣಿ
ಅಂತರ್ಜಾಲ ಆವೃತ್ತಿ: http://www.sanjevani.com
ಮುದ್ರಿತ ಅವತರಿಣಿಕೆಯ ಅಂತರ್ಜಾಲ ತಾಣ: http://www.sanjevani.com/e_paper/e_paper.htm




ಈ ಸಂಜೆ
ಅಂತರ್ಜಾಲ ಆವೃತ್ತಿ: http://www.eesanje.com
ಈ ಪತ್ರಿಕೆಯ ಮುದ್ರಿತ ಅವತರಿಣಿಕೆಯು ಅಂತರ್ಜಾಲದಲ್ಲಿ ಇನ್ನೂ ಲಭ್ಯವಿಲ್ಲವೆಂದು ಕೇಳಿದ್ದೇನೆ. ಆದಷ್ಟು ಶೀಘ್ರದಲ್ಲಿಯೇ ಬರಲಿ ಎಂದು ಹಾರೈಸೋಣ.




ಮುಗಿಸುವ ಮುನ್ನ:
ಮೇಲ್ಕಂಡ ಸಂಪರ್ಕಗಳು ಬದಲಾವಣೆಗೊಳ್ಳುವ ಸಾಧ್ಯತೆಗಳು ಇಲ್ಲದಿಲ್ಲ. ಹಾಗೇನಾದರು ಆಗಿ, ಮೇಲಿನ ಸಂಪರ್ಕಗಳು ಕೆಲಸ ಮಾಡದಿರುವುದು ನಿಮ್ಮ ಗಮನಕ್ಕೆ ಬಂದಲ್ಲಿ ದಯವಿಟ್ಟು ತಿಳಿಸಿ. ಹಾಗೆಯೇ, ಕನ್ನಡದ ಇನ್ನಿತರ ಪ್ರಮುಖ ದಿನಪತ್ರಿಕೆಗಳಾವುದಾದರೂ ಇದ್ದು, ಅದರ ಅಂತರ್ಜಾಲ ಆವೃತ್ತಿಯು ಲಭ್ಯವಿದ್ದಲ್ಲಿ, ತಿಳಿಸಿ.

- ಮನ

Link

Friday, July 07, 2006

 

ಮೋಹಿನಿ....ಮೋಹಿನಿ!!

ಮುನ್ನುಡಿ:
ಸುಮಾರು ಒಂದು ವಾರದಿಂದ ಈ ಮೋಹಿನಿಯು 'ಮನ'ಕಾಡುತ್ತಿದ್ದಾಳೆ. ಬಹುದಿನಗಳ ನಂತರ ಹಂಸಲೇಖ ಅವರ ಸಂಗೀತ, ಸಾಹಿತ್ಯದಲ್ಲಿ ಬಂದಂತಹ ಸುಂದರವಾದ ಹಾಡು. ಇವತ್ತೇನೋ ಈ ಹಾಡು ಟೈಪ್ ಮಾಡಲೇಬೇಕು ಅಂತ ಪ್ರೇರಣೆಯಾಯಿತು. ಈಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.


ಚಿತ್ರ: ಮೋಹಿನಿ ೯೮೮೬೭೮೮೮೮೮
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಅನುರಾಧ ಶ್ರೀರಾಂ

ಮೋಹಿನಿ
ಮೋಹಿನಿ
ಮೋಹಿನಿ
ಮೋಹಿನಿ

ಮೋಹಿನಿ ಮೋಹಿನಿ.......
ಹೃದಯವಾ ನಡೆಸುವಾ ಬೆಚ್ಚನೇ ಗಾಳಿಯೀ ಮೋಹಿನಿ
ಪನಿರಿ ಸರಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸನ್ಮೋಹಿನಿ
ಮೋಹಿನಿ ಮೋಹಿನಿ
ಮೋಹಿನಿ ಸನ್ಮೋಹಿನಿ

ಮೋಹಿನಿ ಮೋಹಿನಿ
ಹೃದಯವಾ ನಡೆಸುವಾ ಬೆಚ್ಚನೆ ಗಾಳಿಯೀ ಮೋಹಿನಿ
ಪನಿರಿ ಸನಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸನ್ಮೋಹಿನಿ

ಬೇಸರದ ರಾತ್ರಿಗೆ ನನ್ನನ್ನು ನೆನೆಯಿರಿ
ಸೋತ ನಿಮ್ಮ ಪ್ರೀತಿಯ ಕಥೆಗಳಾ ಹೇಳಿರಿ
ನನ್ನ ಕಥೆ ಹೇಳುವೆ
ನಿಮ್ಮ ವ್ಯಥೆ ಮರೆಸುವೆ
ನೀವೆಂದು ಕಾಣದಂಥ ಹೃದಯಲೋಕ ತೋರುವೆ
ಎಲ್ಲಾ ಭಗ್ನಪ್ರೇಮಿಗಳೆ ಏಳಿ
ನನ್ನ ನೆರಳಿನ ಸಂಗ ಹಾಡಿ
ನೊಂದ ಎಲ್ಲಾ ವಿರಹಿಗಳೇ ಕೇಳಿ
ನನ್ನ ಹೃದಯದ ಹಾಡ ಹಾಡಿ
ಅಲೆಯೋಣ ಎಲ್ಲಾರು ಪ್ರೀತಿಗೆ
ಬನ್ನಿ ಬನ್ನಿ ಅರ್ಧ ಪ್ರಾಣ ತನ್ನೀ.........!

ಮೋಹಿನಿ ಮೋಹಿನಿ
ಹೃದಯವಾ ನಡೆಸುವಾ ಬೆಚ್ಚನೇ ಗಾಳಿಯೀ ಮೋಹಿನಿ
ಪನಿರಿ ಸರಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸನ್ಮೋಹಿನಿ
ಮೋಹಿನಿ ಮೋಹಿನಿ
ಮೋಹಿನಿ ಸನ್ಮೋಹಿನಿ

ನನ್ನೆದೆ ನನ್ನೆದೆ
ಭಗಭಗ ಉರಿದಿದೇ
ಅದರಲೆ ಹೊತ್ತಿದ
ಬೆಂಕಿಯು ನಿನ್ನದೇ
ಗಾಳಿಗೂ ಬೆಂಕಿಗೂ
ಸಂಗ್ರಾಮ ಸಾಗಿದೆ
ಈ ಬೆಂಕಿ ಆರದಂತು ಜೀವದಾನ ಬೇಕಿದೆ

ಗಾಳಿ ನನಗೆ ಲೋಕಾನೆ ಊರು
ಗಾಳಿ ನನ್ನ ತಡೆಯೋರು ಯಾರು
ನಿನ್ನ ಬೆಂಕಿಯೇ ಬೆಳಕು ನನಗೆ
ನನ್ನ ಪ್ರೀತಿಯೇ ಅಂತ್ಯ ನಿನಗೆ
ಸವಿಯೋಣ ಸೌಂದರ್ಯ ಲಹರಿಯಾ
ತಾಳ ಮೇಳ ಪ್ರಳಯ ಅದರಾ ಆಳ........!

ಮೋಹಿನಿ ಮೋಹಿನಿ
ಹೃದಯವಾ ನಡೆಸುವಾ ಬೆಚ್ಚನೆ ಗಾಳಿಯೀ ಮೋಹಿನಿ
ಪರಿರಿ ಸರಿಸರಿಸ ಸಗಪ ಮಪಮಪಮ
ಸಂಗೀತ ಹೊಮ್ಮಿಸೋ ಸನ್ಮೋಹಿನಿ
ಮೋಹಿನಿ ಮೋಹಿನಿ
ಮೋಹಿನಿ ಸನ್ಮೋಹಿನಿ

ಮುಗಿಸುವ ಮುನ್ನ:
ಹಾಡನ್ನು ಕೇಳ್ತಾ ಕೇಳ್ತಾ ಅದರ ಸಾಹಿತ್ಯ ಟೈಪ್ ಮಾಡೋದು, ನನ್ನ ಹವ್ಯಾಸಗಳಲ್ಲೊಂದು. ಯಾರಿಗಾದರೂ ಯಾವುದಾದರೂ ಹಾಡಿನ ಸಾಹಿತ್ಯ ಬೇಕಿದ್ದರೆ, ದಯವಿಟ್ಟು ತಿಳಿಸಿ.
ಹಾಂ..ಕಡ್ಡಾಯವಾಗಿ ಕನ್ನಡ ಹಾಡುಗಳು ಮಾತ್ರ. :-)

~ ಮನ


Thursday, July 06, 2006

 

ಕನ್ನಡಪ್ರಭ ಲೇಖನಗಳ ಲಿಂಕ್ ಹಾಕುವಾಗ...

ಮುನ್ನುಡಿ:
ಮೊನ್ನೆಯಷ್ಟೆ ವಿಜಯಕರ್ನಾಟಕ ಪತ್ರಿಕೆಯ ಅಂತರ್ಜಾಲ ಆವೃತ್ತಿಯಲ್ಲಿನ 'ಅಚಾತುರ್ಯ'ದ ಬಗ್ಗೆ ಬರೆದದ್ದು ಸರಿಯಷ್ಟೆ. ಅದರ ಬೆನ್ನಲ್ಲೇ ಇನ್ನೊಂದು ಪತ್ರಿಕೆಯ ಅಂತರ್ಜಾಲ ಆವೃತ್ತಿಯ ಬಗ್ಗೆ ಬರೆಯಬೇಕಾಗಿ ಬಂದದ್ದು ಸೋಜಿಗ! ಆದರೆ ಈ ಬಾರಿ, ವಿಷಯ ನೆಮ್ಮದಿಗೆಡಿಸುವಂತದ್ದು ಅಲ್ಲ, ನೆಮ್ಮದಿ ತರುವಂತದ್ದು ಮತ್ತು ಬಹಳಷ್ಟು ಜನರಿಗೆ ಉಪಯುಕ್ತವಾಗುವಂತದ್ದು. ಈ ಲೇಖನದ ಕಾರಣಕರ್ತರು: ವಿಚಿತ್ರಾನ್ನದಾತ ಶ್ರೀವತ್ಸ ಜೋಶಿಯವರು. ಇಲ್ಲಿ ಹೇಳಹೊರಟಿರುವ ತಂತ್ರದ ಕಾಪಿರೈಟ್ ಕೂಡ ಅವರದೇ!


ಅಂತರ್ಜಾಲ ಒಂದು ಬಲುದೊಡ್ಡ ಸಂಸಾರ ಸಾಗರ. ಇಲ್ಲಿ ಬಹುತೇಕ ಎಲ್ಲ ತಾಣಗಳೂ ಇತರ ತಾಣಗಳಿಗೆ ನೆಂಟರು. ಆ ನೆಂಟಸ್ತಿಕೆಯ ಗಂಟು ಹಾಕುವುದು ಒಂದು 'ಹೈಪರ್ ಲಿಂಕ್' (ಅಥವಾ ಲಿಂಕ್, ಸಂಪರ್ಕ, ಕೊಂಡಿ ಇತ್ಯಾದಿ) ಎಂಬ ಮಧ್ಯವರ್ತಿ. ಒಂದು ತಾಣದಿಂದ ಇನ್ನೊಂದಕ್ಕೆ ಸುಲಭವಾಗಿ ನೆಗೆಯುವುದಕ್ಕೆ ಲಿಂಕುಗಳ ಪಾತ್ರ ಮಹತ್ತರವಾದುದು.
ಒಂದು ತಾಣದಲ್ಲಿನ ಲೇಖನವೊಂದರ ಲಿಂಕ್ ಅನ್ನು ನಾವು ಈಮೈಲ್ ಗಳಲ್ಲಿ, ನಮ್ಮದೇ ಆದ ತಾಣಗಳಲ್ಲಿ, ವಿಶ್ವಕೋಶದ ಪುಟಗಳಲ್ಲಿ, ಹೀಗೆ ಎಲ್ಲೆಡೆ ಉಪಯೋಗಿಸುತ್ತೇವೆ. ಆದರೆ ಹಾಗೆ ಉಪಯೋಗಿಸಿದ ಲಿಂಕು, ಕೆಲಸಮಯದ ನಂತರ ಕೆಲಸ ಮಾಡುತ್ತದೆಯೋ ಇಲ್ಲವೇ ಮುರಿದು ಬಿದ್ದಿದೆಯೋ ಎಂಬುದು ನಮ್ಮ ಗಮನಕ್ಕೆ ಬರುವುದು ಅಪರೂಪ, ನಾವು ಚೆಕ್ ಮಾಡುತ್ತಾ ಇರುವುದೂ ಕೂಡ ತ್ರಾಸದ ಕೆಲಸ. ಈ ರೀತಿ, ಕೆಲಸಕ್ಕೆ ಬಾರದ ಕೊಂಡಿಗಳನ್ನು(ಮುರಿದು ಬಿದ್ದ) ಸಾಮಾನ್ಯವಾಗಿ 'ಬ್ರೋಕನ್ ಲಿಂಕ್ಸ್' ಎನ್ನುವರು.

ಕನ್ನಡಪ್ರಭದ ಲೇಖನಗಳ ಕೊಂಡಿಗಳು, ಒಂದು ದಿನವಷ್ಟೇ(ಅಥವಾ ಸ್ವಲ್ಪ ಹೆಚ್ಚು) ಜೀವಂತವಾಗಿರುತ್ತದೆ. ನಂತರ ಅದನ್ನು ಉಪಯೋಗಿಸಿದರೆ, "Please select some other news or categories." ಎಂದು ಬರುತ್ತದೆ. ಅಂದರೆ, ಆ ಲಿಂಕು "ಬ್ರೋಕನ್ ಲಿಂಕ್" ಆಗಿದೆ ಎಂದರ್ಥ.

ಉದಾಹರಣೆಗೆ: ಬೇಡರಕಣ್ಣಪ್ಪ ಚಿತ್ರಕ್ಕೆ ರಾಜಕುಮಾರ್ ಆಯ್ಕೆ ವಿವರಗಳು - ಹೆಚ್.ಎಲ್.ಎನ್.ಸಿಂಹರವರ ಪುತ್ರ ಹೆಚ್.ಎಲ್.ಶೇಷಚಂದ್ರ ಲೇಖನ ಕನ್ನಡಪ್ರಭದಲ್ಲಿ, ಡಾ.ರಾಜ್ ಅಸ್ತಂಗತರಾದ ಮರುದಿನ ಪ್ರಕಟವಾಗಿತ್ತು. ಆ ಲೇಖನದ ಕೊಂಡಿ:

http://www.kannadaprabha.com/NewsItems.asp?ID=KP%2A20060412220146&Title=Dr%2E+Rajkumar+passed+away&lTitle=s%DB%2E+%C1%DBe%E9O%DA%DF%C8%DA%E1%DB%C1%E9+B%AC%84%C4%C7&Topic=0&Dist=0

ಈ ಲೇಖನವು ಕೆಲಸ ಮಾಡುತ್ತಿಲ್ಲ. ಇದನ್ನು ಡಾ.ರಾಜ್‍ಕುಮಾರ್ ವಿಕಿಪೀಡಿಯ ಲೇಖನದಲ್ಲಿ ಉಪಯೋಗಿಸಲಾಗಿತ್ತು. ಈ ಲೇಖನವು ಕೆಲಸ ಮಾಡುತ್ತಿಲ್ಲವಾದ್ದರಿಂದ ಇದರ ಲಿಂಕನ್ನು ತೆಗೆಯಬೇಕಾಗಿತ್ತು. ಆದರೆ ಈಗ ತೆಗೆಯುವ ಗೋಜಿಲ್ಲ! ಅದನ್ನು ಕೊಂಚ ಮಾರ್ಪಾಡು ಮಾಡಿದರೆ ಆಯಿತಷ್ಟೆ!
ಆ ಮಾರ್ಪಾಡುವಿಕೆಯ ಗುಟ್ಟನ್ನು ರಟ್ಟು ಮಾಡಿ ಪುಣ್ಯ ಕಟ್ಟಿಕೊಂಡವರು: ಶ್ರೀವತ್ಸ ಜೋಶಿ

ಮಾಡಬೇಕಾದ್ದು ಇಷ್ಟೇ:
೧. ಲಿಂಕಿನಲ್ಲಿ &Title= ಎಂದು ಇದೆಯಲ್ಲಾ ಅದು ಮತ್ತು ಅಲ್ಲಿಂದ ಮುಂದೆ ಇರುವುದನ್ನೆಲ್ಲಾ ಸಂಪೂರ್ಣವಾಗಿ ತೆಗೆದುಹಾಕಿ.
೨. NewsItems.asp ಅನ್ನುವುದನ್ನು News.asp ಎಂದು ಬದಲಾಯಿಸಿ.
ಬಹುಕಾಲ (ಬಹುಷ: ಚಿರಕಾಲ) ಜೀವಂತವಾಗಿ ಉಳಿಯುವ ಲಿಂಕ್ ಈಗ ನಿಮ್ಮ ಮುಂದೆ ಹಾಜರ್!

ಮೇಲಿನ ಎರಡು ಬದಲಾವಣೆ ಮಾಡಿದ ನಂತರ ದೊರಕಿದ ಕೊಂಡಿ: http://www.kannadaprabha.com/News.asp?ID=KP%2A20060412220146

ಈಗ ನೋಡಿ, ಈ ಸಜೀವ ಕೊಂಡಿ ಸರಿಯಾದ ಲೇಖನಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ.
ಇನ್ನು ಮುಂದೆ ಕನ್ನಡಪ್ರಭದ ಯಾವುದೇ ಕೊಂಡಿಗಳನ್ನು ನಿಮ್ಮ ತಾಣದಲ್ಲಿ ಹಾಕುವಾಗ, ಅಥವ ಇತರರೊಡನೆ ಹಂಚಿಕೊಳ್ಳುವಾಗ ಅದಕ್ಕೆ ಮಾಡಬೇಕಾದ ಮೇಕಪ್ (ಮೇಲೆ ವಿವರಿಸಿದಂತೆ) ಮಾಡಿ, ನಂತರ ಹಾಕಿ/ಹಂಚಿಕೊಳ್ಳಿ.

ಮುಗಿಸುವ ಮುನ್ನ:
ಈ ಉಪಯುಕ್ತ 'ಮಾಹಿತಿ','ತಂತ್ರ','ಜ್ಞಾನ'ವನ್ನು ನಮ್ಮೊಡನೆ ಹಂಚಿಕೊಂಡ ಶ್ರೀವತ್ಸ ಜೋಶಿಯವರಿಗೆ ಬಹಳ ಧನ್ಯವಾದಗಳು!

~ ಮನ

Link
This page is powered by Blogger. Isn't yours?