ಮನದ ಮಾತು

Friday, August 11, 2006

 

ವರಮಹಾಲಕ್ಷ್ಮಿ ಹಬ್ಬದ ಕನ್ನಡ ಚಿತ್ರರಂಗ

ಮುನ್ನುಡಿ:
ಸಾಮಾನ್ಯವಾಗಿ, ಯಾವುದೇ ಮಹತ್ತರವಾದ ಕೆಲಸವನ್ನು ಪ್ರಾರಂಭಿಸುವುದು, ಹೊಸ ಹೆಜ್ಜೆಗಳನ್ನಿಡುವುದು ಸುಸಂದರ್ಭಗಳಲ್ಲಿಯೇ. ಹಬ್ಬಗಳು ನಮ್ಮ ಧರ್ಮಗಳಲ್ಲಿ ಅವುಗಳದೇ ಆದ ಅಚ್ಚೊತ್ತಿಬಿಟ್ಟಿವೆ.
ಕೆಲವರಿಗೆ ಸಂಕ್ರಾಂತಿಯು ಅದೃಷ್ಟದಾಯಕ ಹಬ್ಬವಾದರೇ, ಇನ್ನು ಕೆಲವರಿಗೆ ವಿಘ್ನನಿವಾರಕ ವಿನಾಯಕ ಚತುರ್ಥಿ ಎಂದರೆ ಎಂತಹ ಕೆಲಸವಾದರೂ ಜಯಿಸಬಲ್ಲೆನೆಂಬ ವಿಶ್ವಾಸ. ನನ್ನ ಮಟ್ಟಿಗೆ ವಿಜಯದಶಮಿ ಎಂದರೆ, ಅದೇನೋ ವಿಶೇಷ ಗೌರವ, ಭಯ, ಭಕ್ತಿ, ಆಕರ್ಷಣೆ, ಉತ್ಸಾಹ.
ಕನ್ನಡ ಚಿತ್ರರಂಗದ ಪಾಲಿಗೆ ಇತ್ತೀಚಿನ ವರ್ಷಗಳಲ್ಲಿ ಒಂದು ಹಬ್ಬವು ಅತ್ಯಂತ ವಿಶೇಷವಾಗಿಬಿಟ್ಟಿದೆ. ನೋಡೋಣ ಬನ್ನಿ.

೨೦೦೪ - ವರಮಹಾಲಕ್ಷ್ಮಿ ಹಬ್ಬ - ಬಿಡುಗಡೆಯಾದ ಚಿತ್ರ ಆಪ್ತಮಿತ್ರ.
ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಪ್ರೇಕ್ಷಕನ ನಾಡಿಮಿಡಿತಕ್ಕೆ ಸ್ಪಂದಿಸಿದ ಚಿತ್ರ. ಒಂದು ಸಂಪೂರ್ಣ ವರ್ಷ ಸತತ ಪ್ರದರ್ಶನ ಕಂಡ ದಾಖಲೆಯ ಹೆಗ್ಗಳಿಕೆ ಈ ಚಿತ್ರದ್ದು.
ತನ್ನ ಅದ್ಭುತ ಅಭಿನಯಕ್ಕೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂದೂ ಕಾಯದೆ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದು ಮಾತ್ರ ಸೌಂದರ್ಯ ಮಾಡಿದ ಅನ್ಯಾಯ :(
ರಾರಾ.....ಮತ್ತೊಮ್ಮೆ ಹುಟ್ಟಿ ರಾರಾ! ದುರ್ಗಾಷ್ಟಮಿಯಂದೇ ರಾರಾ, ಪರ್ವಾಲೇದು.

೨೦೦೫ - ವರಮಹಾಲಕ್ಷ್ಮಿ ಹಬ್ಬ - ಜೋಗಿ
ಅರೇ ಜೋಗಿ.....!!
ಜೋಗಿಯ ಜ್ವರಕೆ ಸಿಲುಕದವರಾರು?
ಜೋಗಿಯ ಜಪ ಮಾಡದವರಾರು?
ಹೊಡಿಮಗ ಹೊಡಿಮಗ ಎಂದು ಗುನುಗದವಾರಾರು?

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಎಂದೂ ಕಂಡು ಕೇಳರಿಯದಷ್ಟು ಕುತೂಹಲ, ಆಸಕ್ತಿ, ನಿರೀಕ್ಷೆ ಮೂಡಿಸಿದ ಚಿತ್ರ ಯಾವುದು ಎಂದರೆ, ಸುಲಭವಾದ ಉತ್ತರ: ಜೋಗಿ

ರೌಡಿಸಂ ಮತ್ತು ತಾಯಿಯ ಸೆಂಟಿಮೆಂಟ್ ಎರಡನ್ನೂ ನಾಜೂಕಾಗಿ ಬ್ಲೆಂಡ್ ಮಾಡಿರುವ ಪ್ರೇಂ ನೈಪುಣ್ಯಕ್ಕೆ, ಬೆನ್ನೆಲುಬಾಗಿದ್ದು ಅರುಂಧತಿನಾಗ್ ಮತ್ತು ಶಿವರಾಜಕುಮಾರ್ ಅಮೋಘ ನಟನೆ.


೨೦೦೬- ವರಮಹಾಲಕ್ಷ್ಮಿ ಹಬ್ಬ - ಗಂಡುಗಲಿ ಕುಮಾರರಾಮ
ಒಂದು ವಾರವಾಗಿದೆಯಷ್ಟೆ! ಆದರೆ ಅತ್ಯುತ್ತಮ ಓಪನಿಂಗ್ ದೊರಕಿದೆ. ಬಹಳ ದಿನಗಳಿಂದ ಐತಿಹಾಸಿಕ ಚಿತ್ರಗಳ ಹಸಿವಿನಿಂದ ಬಳಲುತ್ತಿದ್ದ ಪ್ರೇಕ್ಷಕ ಮಹಾಶಯನಿಗೆ ಈ ಚಿತ್ರದ ಮೂಲಕ ರಸದೌತಣ ಉಣಬಡಿಸಿದ್ದಾರೆ ನಿರ್ದೇಶಕ ಭಾರ್ಗವ ಮತ್ತು ತಂಡ. ಚಿತ್ರ ನೋಡಿದ ಪ್ರತಿಯೊಬ್ಬರೂ, ಪತ್ರಿಕೆಗಳು, ಕಿರುತೆರೆ ವಾಹಿನಿಗಳು ಈ ಚಿತ್ರದ ಬಗ್ಗೆ ಪ್ರಮುಖವಾಗಿ ವಿಶ್ಲೇಷಿಸುತ್ತಿರುವುದು ಶಿವರಾಜಕುಮಾರ್ ನಟನೆಯ ಬಗ್ಗೆ. "First day first show" ಜೀ-ಕನ್ನಡ ಕಾರ್ಯಕ್ರಮದಲ್ಲಿ ಸ್ವತಃ ಶಿವರಾಜಕುಮಾರ್ ಅವರೇ ಹೇಳಿದಂತೆ, ಮಗನು ಅಪ್ಪನಂತೆ ಐತಿಹಾಸಿಕ ಪಾತ್ರಕ್ಕೆ ಜೀವತುಂಬಬಲ್ಲನೇ ಎಂಬ ಕುತೂಹಲದಿಂದ ಚಿತ್ರ ನೋಡಲು ಬರುವರೇ ಬಹಳಷ್ಟು ಮಂದಿ. ನಿಜ, ಐತಿಹಾಸಿಕ ಪಾತ್ರಗಳಿಗೆ ಭಾರತದಲ್ಲೇ ಅದ್ವಿತೀಯರೆಂದೆನಿಸಿಕೊಂಡಿರುವ ನಟಸಾರ್ವಭೌಮ ಡಾ.ರಾಜ್‍ಕುಮಾರ್ ಅಭಿನಯಿಸಬೇಕಿದ್ದ ಪಾತ್ರವೊಂದು ಅವರ ಮಗನ ಅಭಿನಯದಲ್ಲಿ ಸಾಕಾರಗೊಂಡಿದೆ ಎಂದರೆ, ಪ್ರೇಕ್ಷಕರು ಖಂಡಿತಾ ಅವರ ಮೆಚ್ಚಿನ "ಅಣ್ಣಾವ್ರನ್ನು" ಚಿತ್ರದಲ್ಲಿ ಹುಡುಕಲು ಪ್ರಯತ್ನಿಸುವುದು ಸಹಜ.
ಮೊದಲ ವಾರದ ಮಟ್ಟಿಗೆ ಪ್ರೇಕ್ಷಕರಿಂದ, ಮಾಧ್ಯಮಗಳಿಂದ, ಚಿತ್ರರಂಗದ ಪ್ರಮುಖರಿಂದ ಅಪಾರ ಮೆಚ್ಚುಗೆ ಗಳಿಸಿರುವ ಈ ಚಿತ್ರವು ಯಶಸ್ಸಿನ ಉತ್ತುಂಗವನ್ನೇರಿ, ವರಮಹಾಲಕ್ಷ್ಮಿ ಹಬ್ಬದ ಚಿತ್ರ ಸರಣಿಯ ದಾಖಲೆಯನ್ನು ಮತ್ತಷ್ಟು ಬಲಪಡಿಸಲಿ.

ಸ್ವಾರಸ್ಯ:
ಈ ಮೂರೂ ಮಹತ್ತರ, "ವರಮಹಾಲಕ್ಷ್ಮಿ" ಕೃಪಾಕಟಾಕ್ಷದ ಚಿತ್ರಗಳಿಗೆ ಸಂಗೀತ ನೀಡಿರುವವರು ಗುರುಕಿರಣ್.
ಮೊದಲೆರಡೂ ಚಿತ್ರಗಳ ಸಂಗೀತ ಮತ್ತು ಹಾಡುಗಳು ಅಪಾರವಾದ ಜನಮೆಚ್ಚುಗೆಗೆ ಪಾತ್ರವಾಗಿದ್ದು, ಕುಮಾರರಾಮನೂ ಅದೇ ಹಾದಿಯತ್ತ ಸಾಗುತ್ತಿರುವ ಕುರುಹು ತೋರಿದ್ದಾನೆ. ಈ ಚಿತ್ರಗಳ ಯಶಸ್ಸಿಗೆ ಗುರುಕಿರಣ್ ಅವರ ಸಂಗೀತದ ಕೊಡುಗೆಯು ಅಪಾರವಾದದ್ದು. ಮುಂದಿನ ವರ್ಷದ ಬ್ಲಾಕ್‍ಬಸ್ಟರ್ ವರಮಹಾಲಕ್ಷ್ಮಿ ಹಬ್ಬದ ಚಿತ್ರಕ್ಕೂ ಗುರುಕಿರಣ್ ಸಂಗೀತವೇ? ಕಾದು ನೋಡಿ :)

ನಿಮಗೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ, ಹಾರ್ದಿಕ ಶುಭಾಶಯಗಳು.
Link
Comments:
"ನನ್ನ ಮಟ್ಟಿಗೆ ವಿಜಯದಶಮಿ ಎಂದರೆ, ಅದೇನೋ ವಿಶೇಷ ಗೌರವ, ಭಯ, ಭಕ್ತಿ, ಆಕರ್ಷಣೆ, ಉತ್ಸಾಹ..."

ನನಗೂ. ವಿಚಿತ್ರಾನ್ನ ಆರಂಭವಾಗಿದ್ದು ವಿಜಯದಶಮಿಯಂದು, ಮಂಗಳವಾರ ೨೦೦೨ರ ಅಕ್ಟೋಬರ್ ೧೫.
 
Same pinch, SJ :)
 
ಮನ,
ಅಪ್ತಮಿತ್ರ ಮತ್ತು ಜೋಗಿ ವರಮಹಾಲಕ್ಷ್ಮಿ ಹಬ್ಬದ ದಿವಸ ಬಿಡುಗಡೆಯಾಯಿತೇ ..ಗೊತ್ತಿರಲಿಲ್ಲ..ನಿಮ್ಮ ಸಿನಿಮಾ ಜ್ಜಾನ ಸೂಪರ್ !

ಗುರುಕಿರಣ್ ಮತ್ತು ವ.ಮಹಾಲಕ್ಷ್ಮಿ ಕಾಂಬಿನೇಷನ್ ಈ ಸರತಿನೂ ಕೆಲ್ಸ ಮಾಡುತ್ತಾ ನೋಡಬೇಕು..
 
ದೊಡ್ಡ ಮಾತು ಶಿವ್, ಧನ್ಯವಾದಗಳು.
 
ಹೌದ? ನನ್ಗೆ ಗೊತ್ತಿರ್ಲಿಲ್ಲ. ಲಚ್ಚಿ ಕುಮಾರಂಗೆ ಒಲಿಲಿ ಅಂತ ಹಾರೈಸೋದ್ರಲಿದ್ದೆ, ಆದ್ರೆ ಯಾಕೊ, ಎಡುವ್ಬುಟ್ಟ ಕುಮಾರ ಅಂಸುತ್ತೆ. ಹೇಳೊಕ್ಕೆ ಆಗೊಲ್ಲ, ಆಪ್ತಮಿಟ್ರ ಕೂಡ ಮೊದಲು ಮಲಗಿತ್ತು, ಎದ್ದಿದ್ದು, ೩ ವಾರದ ತರುವಾಯ.

ಭೂತ
 
ಓಹ್ ಈ ಚಿತ್ರಗಳ ಬಗ್ಗೆ ನನಗೆ ಗೊತ್ತೇ ಇರ್ಲಿಲ್ಲ. ಈಗ ವರಮಹಾಲಕ್ಷ್ಮಿ ಅಂತ ಒಂದು ಚಿತ್ರ ಬರ್ತಿದೆಯೇ?

ಏನೇ ಹೇಳಿ, ಚಿತ್ರಗಳ ಬಗ್ಗೆ ನಿಮ್ಮ ವಿಶ್ಲೇಷಣೆ ಬಹಳ ಚೆನ್ನಾಗಿದೆ.
 
ಅಣ್ಣೋ..ಇಲ್ಲೇ ಗಾಂಧಿನಗರದಲ್ಲಿ ಕುಂತ್ಕಂಡು ಮಾಡಬೇಕಾಗಿದ್ದ ಎಲ್ಲ ವಿಶ್ಶ್ಲೇಷಣೆಗಳನ್ನ ಅಲ್ಲಿಂದಲೇ ಮಾಡಿ ಬಿಸಾಕ್ತಿರೋ ನಿನ್ನ ಶಕ್ತಿಗೆ *ಟೋಪಿಗಳು ಕೆಳಗೆ*!

ಈ ಬಾರಿಯ ವರಮಹಾಲಕ್ಷ್ಮಿ ಹಬ್ಬದ ಪ್ರಸಾದ ಜನ ಹೇಗೆ ಸ್ವೀಕರಿಸ್ತಾರೋ ಕಾದು ನೋಡ್ಬೇಕು!
 
nice blog
 
Post a Comment



<< Home
This page is powered by Blogger. Isn't yours?